Search This Blog

Thursday, January 2, 2020

ಶ್ರೀ ರಮಾಸ್ತುತಿ

*ಶ್ರೀ ಮೊದಲಕಲ್ಲು ಶೇಷದಾಸರ ರಚನೆ*
 *ಸುಳಾದಿ* : *ಶ್ರೀ ರಮಾಸ್ತುತಿ* 
 *ರಾಗ ಕಲ್ಯಾಣಿ* 

 *ಧ್ರುವತಾಳ* 

ಇಂದುಮುಖಿಯೆ ನಿನ್ನ ಸಂದರುಶನದಿಂದಾ -
ನಂದವಾಯಿತು ಅರವಿಂದನಯನೆ
ಅಂದಿಗೆ ಗೆಜ್ಜೆ ಮೊದಲಾದಾಭರಣದಿಂದ
ಸುಂದರವಾದ ರೂಪದಿಂದ ಬಂದು
ಮಂದಹಾಸದಿಂದ ಮಾತನಾಡಿದರಿಂದ
ಬೆಂದು ಪೋದವೆನ್ನ ತ್ರಿವಿಧ ತಾಪ
ಇಂದಿರೆ ಈ ರೂಪದಿಂದ ತೋರಿದಳು
ಬಂಧುವೆನಿಪ ಲೋಕ ಗುರು ಸತಿಯೊ
ಕಂದು ಕಂಧರನಾದ ದೇವನ್ನ ರಾಣಿಯೊ
ಇಂದ್ರಾಣಿ ಮೊದಲಾದ ಜನರೋರ್ವಳೊ
ಮಂದಾಕಿನಿಯೊ ಇದರೊಳೊಂದರಿಯೇ ಕರುಣ -
ಸಿಂಧುವೆ ನಿನ್ನ ಪದಕೆ ನಮೊ ನಮೊ ನಮೋ
ಮಂದರ್ಗೆ ಯೋಗ್ಯವಾದ ಮಾನುಷ್ಯ ದೇಹವನ್ನು
ಪೊಂದಿಪ್ಪ ಕಾರಣದಿಂದ ನಿನ್ನ
ಅಂದವಾದ ರೂಪ ಕ್ರಿಯೆಗಳನ್ನು ತಿಳಿದು
ವಂದಿಸಿ ವರಗಳ ಬೇಡಲಿಲ್ಲ
ಇಂದಿರೆ ರಮಣನ ಬಂಧಕ ಶಕುತಿಯು
ಮಂದನಾದವ ನಾನು ಮೀರುವನೇ
ಕಂದನ ಅಪರಾಧವೆಣಿಸದಲೆ ನೀನು
ಅಂದ ವಚನವನ್ನು ಸತ್ಯ ಮಾಡಿ
ಬಂಧುನೆನಿಸಿಕೊಂಬ *ಗುರುವಿಜಯವಿಠ್ಠಲನ್ನ* 
ಎಂದೆಂದು ಅಗಲದಲಿಪ್ಪ ವರವ ನೀಡು ॥ 1 ॥

 *ಮಟ್ಟತಾಳ* 

ಸಾನುರಾಗದಿ ಎನ್ನ ಸಾಮೀಪ್ಯವ ನೈದಿ
ಪಾಣಿದ್ವಯದಲ್ಲಿ ವೇಣಿ ಸ್ಪರ್ಶ ಮಾಡಿ
ಏನು ಬೇಡುವೆ ಬೇಡು ನೀಡುವೆನೆಂತೆಂದು
ವಾಣಿಯಿಂದಲಿ ನುಡಿದು ಅನುಗ್ರಹಿಸಿದುದಕೆ
ಮಾನುಷಾನ್ನ ಜನಿತ ಅಜ್ಞಾನದಿಂದ
ಜ್ಞಾನನಿಧಿಯೆ ನಿನ್ನ ಪದದ್ವಂದ್ವಕೆ ನಮಿಸಿ
ಮಾನಸಿನಾಪೇಕ್ಷೆ ವಿವರಿಸಿ ಬಿನ್ನೈಸಿ
ಪೂರ್ಣ ಮಾಡು ಎಂದು ವರಗಳ ಬೇಡದಲೆ
ನಿನ್ನ ಪದದ್ವಂದ್ವಕೆ ನಮಿಸಿ
ಹೀನ ಮನೋಭಾವ ಮಾಡಿದೆ ಹೇ ಜನನಿ
ಧೇನುವಿಗೆ ವತ್ಸ ಮಾಡಿದ ಅಪಚಾರ
ತಾನೆಣಿಸಿ ಅದರ ಸಾಕದೆ ಬಿಡುವದೆ
ಮಾನನಿಧಿಯೆ ಎನ್ನ ಅನುಚಿತವೆಣಿಸದಲೆ
ಏನು ಬೇಡಿದ ವರವ ನೀಡುವೆ ಎಂತೆಂದ
ವಾಣಿ ಸತ್ಯ ಮಾಡು ಅವ್ಯವಧಾನದಲಿ
ಜ್ಞಾನಪೂರ್ಣ *ಗುರುವಿಜಯವಿಠ್ಠಲರೇಯನ* 
ಪ್ರೇರಣೆಯಿಂದಲ್ಲಿ ಪ್ರಾರ್ಥಿಸುವೆನು ನಿನ್ನ ॥ 2 ॥

 *ತ್ರಿವಿಡಿತಾಳ* 

ನಿನ್ನನುಗ್ರಹದಿಂದ ಧನ ಮೊದಲಾದ ವಸ್ತು
ತನ್ನಿಂದ ತಾನೆ ಬಂದು ಒದಗುತಿರೆ
ಇನ್ನಿದಕ್ಕೆ ನಾನು ನಿನ್ನ ಪ್ರಾರ್ಥಿಪೊದಿಲ್ಲ
ಬಿನ್ನಪವನು ಉಂಟು ಗ್ರಹಿಸಬೇಕು 
ಅನಂತ ಜನುಮದ ಪುಣ್ಯ ಪ್ರಭಾವದಿಂದ
ಘನ್ನ ಮಹಿಮನಾದ ಪುರುಷನೋರ್ವ
ಕ್ಷಣವಗಲದಲಿಪ್ಪ ಆಪ್ತನಾದವನೆನಿಸಿ
ಎನ್ನ ವಿರಹಿತವಾದ ಸ್ಥಾನವನ್ನು
ಕಣ್ಣಿಲಿ ನೋಡಲಾರೆನೆಂದು ನುಡಿದವನ್ನ
ಎನ್ನ ದುರ್ಭಗದಿಂದ ಅಗಲಿ ನಾನಾ
ಬನ್ನ ಬಡುತಲಿಪ್ಪೆ ನಿಮಿಷ ಒಂದ್ಯುಗವಾಗಿ
ಮನ್ನಿಸಿ ಮನಕೆ ತಂದು ಪೂರ್ವದಂತೆ
ಮನ್ಮನದಲಿ ತೋರೊ ವ್ಯವಧಾನ ಮಾಡದಲೆ
ಇನ್ನಿದೆ ಬೇಡುವೆ ಜನನೀಯೇ
ನಿನ್ನಿಂದ ನುಡಿದಂಥ ವಾಕ್ಯ ಸಫಲ ಮಾಡಿ
ಮನ್ಮನೋರಥವನು ಪೂರ್ಣ ಮಾಡು ಆ -
ಪನ್ನರ ರಕ್ಷಿಸುವ ಬಿರಿದು ನಿನಗೆ ಉಂಟು
ಸನ್ನುತಿಸಿ ಬೇಡಿಕೊಂಬೆ ಗುಣನಿಧಿಯೇ
ಪನ್ನಂಗತಲ್ಪ *ಗುರುವಿಜಯವಿಠ್ಠರೇಯ* 
ನಿನ್ನ ವಾಕ್ಯವವಹಿಪ ಸರ್ವಕಾಲ ॥ 3 ॥

 *ಅಟ್ಟತಾಳ* 

ಕರಣಗಳಲಿ ಹರಿ ವ್ಯಾಪಕನೆಂತೆಂಬ
ಪರಿಯನ್ನು ತಿಳಿದಿಪ್ಪ ನರ ನುಡಿದ ವಾಕ್ಯ
ಪರಮೇಷ್ಠಿ ಮೊದಲಾದ ಸುರರು ಸಹಿತನಾದ
ಸಿರಿಪತಿ ವಹಿಸುವನೆಂದು ಪೇಳುತಲಿರೆ
ಕರಣಮಾನಿಗಳಾದ ಸುರರಿತ್ತ ವರಗಳ
ಹರಿ ಸತ್ಯ ಮಾಡುವನೆಂಬದಚ್ಚರವೇನೊ
ಶರಣನ್ನ ಮನೋರಥ ಪೂರ್ಣ ಮಾಡುವದಕ್ಕೆ
ಕೊರತೆ ನಿನಗಾವುದು ಕೋಮಲಾಂಗಿಯೆ ನಿನ್ನ
ಚರಣ ದ್ವಂದ್ವಕೆ ನಮಿಸಿ ಶರಗೊಡ್ಡಿ ಬೇಡುವೆ
ತ್ವರಿತದಿಂದಲಿ ಈ ವರವನ್ನೆ ಪಾಲಿಸು
ಸುರಪಕ್ಷಪಾಲ *ಗುರುವಿಜಯವಿಠ್ಠಲ* ನಿಮ್ಮ
ಕರವಶವಾಗಿಪ್ಪ ಆವಾವ ಕಾಲದಲಿ ॥ 5 ॥

 *ಆದಿತಾಳ* 

ಆವಾವ ಜನ್ಮದಲ್ಲಿ ಅರ್ಚಿಸಿದೆನೋ ನಿನ್ನ
ಆವಾವ ಕಾಲದಲ್ಲಿ ಅನುಗ್ರಹಿಸಿದ ವರವು
ಈ ವಿದ್ಯಮಾನವಾದ ಜನುಮದಲೊಮ್ಮೆಗೆನ್ನ
ದೇವಿಯೆ ನಿನ್ನ ಪಾದ ಸಾರಿದವನಲ್ಲಿ
ಗೋವತ್ಸ ನ್ಯಾಯದಿಂದ ನಿನಗೆ ನೀನು ಬಂದು
ಆವದು ಬೇಡಿದ ವರಗಳನೀವೆನೆಂದು
ಸುವಾಣಿಯಿಂದ ಎನ್ನ ಆದರಿಸಿದ ನಿನ್ನ
ಔದಾರ್ಯತನಕಿನ್ನು ಆವದಾವದು ಸಮ
ಶ್ರೀ ವತ್ಸಲಾಂಛನ *ಗುರುವಿಜಯವಿಠ್ಠಲನ್ನ* 
ಭಾವದಿಂದಲಿ ನೋಳ್ಪ ಭಾಗ್ಯವೇ ಪಾಲಿಸೇ ॥ 5 ॥

 *ಜತೆ* 

ನಿನ್ನ ದರುಶನದಿಂದ ಅನಿಷ್ಟವು ನಾಶ
ಘನ್ನ ಇಷ್ಟ ರೂಪ *ಗುರುವಿಜಯವಿಠ್ಠಲ* ಪ್ರಾಪ್ತ ||

No comments:

Post a Comment

Note: Only a member of this blog may post a comment.